ಬುಧವಾರ, ಆಗಸ್ಟ್ 18, 2010

ನಾನೆಸ್ಟು ಅಲ್ಪಾಯುಷಿ...

(ಸರಿಯಾಗಿ ಮೂರು ತಿಂಗಳುಗಳ ನಂತರ ನಾನು ಖಾಲಿಹಾಳೆಯಲ್ಲಿ ಅಕ್ಷರ ಮೂಡಿಸುತ್ತಿದ್ದೇನೆ .ಈ ನಡುವೆ ನನ್ನ ಬ್ಲಾಗ್ಗೆ ಒಂದುವರುಷ ಆದದ್ದು ಕೂಡ ನನಗೆ ಮರೆತು ಹೋಗಿತ್ತು!!! .)

ಚಿಕ್ಕಂದಿನಲ್ಲಿ ಬಾಲಮಂಗಳ , ಚಿತ್ರಕಥೆ ಪುಸ್ತಕಗಳನ್ನು ಓದುವ ಹವ್ಯಾಸ ಇತ್ತು .ಅಪರೂಪಕ್ಕೆ 'ಸ್ಪೋರ್ಟ್ಸ್ ಸ್ಟಾರ್ ' ಅನ್ನೋ ಆಂಗ್ಲ ಪತ್ರಿಕೆಯನ್ನೂ ಖರೀದಿಸುತ್ತಿದ್ದೆ .ವಿಶೇಷವೆಂದರೆ ಆಗಿನ್ನೂ ನನಗೆ ಇಂಗ್ಲಿಷ್ ಓದಲು ಸರಿಯಾಗಿ ಬರುತ್ತಿರಲಿಲ್ಲ .ಆ  ಆಂಗ್ಲ ಪತ್ರಿಕೆಯನ್ನು ಖರೀದಿಸಲು ನಾನೊಂದು ಮಾನದಂಡವನ್ನಿಟ್ಟಿದ್ದೆ , ಅದೆಂದರೆ ಆ ಪತ್ರಿಕೆಯಲ್ಲಿ ಬರುವ ಕ್ರಿಕೆಟ್ ಆಟಗಾರರ ಫೋಟೋಗಳು. ನನ್ನ ರೂಲ್ಸ್ ಪ್ರಕಾರ ಕನಿಸ್ಟ  ೫೦ ಕ್ರಿಕೆಟ್ ಫೋಟೋಗಳು ಇದ್ದರೆ ಆ ವಾರ 'ಸ್ಪೋರ್ಟ್ಸ್ ಸ್ಟಾರ್ ' ಅನ್ನು ಖರೀದಿಸ ಬಹುದು ಇಲ್ಲವಾದರೆ ಇಲ್ಲ .ನಂತರದ ದಿನಗಳಲ್ಲಿ  ನಾನು ಖರೀದಿಸುತಿದ್ದುದು ನೂತನ , ಭಾವನ ,ತರಂಗ ,ಸುಧಾದಂತ ವಾರ ಪತ್ರಿಕೆಗಳು , ಮಾಸಪತ್ರಿಕೆಗಳು .
ಈ ನಡುವೆ ನಾನು ಪೀಯೂಸೀ ಮುಗಿಸಿ ಡಿಗ್ರಿಗಾಗಿ ಉಜಿರಗೆ ತೆರಳಿದೆ .ಪಧವಿಯ ಮೂರುವರ್ಷದ ಓದಿನ ನಡುವೆ ನನಗೆ ಹೆಚ್ಚಾಗಿ ಜೊತೆಯಾದದ್ದು -ಚುಟುಕು , ದಿಕ್ಸೂಚಿಯಂಥ ಮಾಹಿತಿ ತುಂಬಿದ ಪುಸ್ತಕಗಳು.ಇದೆ ಸಮಯದಲ್ಲಿ ನಾನು  ಗ್ರಂಥಾಲಯದಿಂದ ಕೂಡ ಪುಸ್ತಕಗಳನ್ನು ಓದಲು ಪ್ರಾರಂಭಿಸಿದೆ -ಅಂದರೆ ನನ್ನ ಓದು ಸಾಹಿತ್ಯದ ಮತ್ತೊಂದು stage ಗೆ   ಬಂದು ತಲುಪಿತು. ಹಾಗಿದ್ದರೂ     personality development ಗೆ ಸಂಬಂಧಿಸಿದ ಪುಸ್ತಕಗಳನ್ನು ಬಿಟ್ಟರೆ ಬೇರೆ ಪುಸ್ತಕಗಳನ್ನು ನಾನು ಇಲ್ಲಿ  ಓದಿದ್ದೆ ಕಡಿಮೆ ಅನ್ನಬಹುದು.ಅಪವಾದ ಅನ್ನುವಂತೆ ಆ ದಿನಗಳಲ್ಲಿ  ಒಂದು ಚಿಕ್ಕ ಕಾದಂಬರಿಯನ್ನು ನಾನು ಓದಿದ್ದೆ ; ಈ ಕಾದಂಬರಿ ನನ್ನ ಸೀನಿಯರ್ ವಿದ್ಯಾರ್ಥಿಯೊಬ್ಬನಿಗೆ ಪಟ್ಯವಾಗಿತ್ತು ಮತ್ತು ಪರೀಕ್ಷೆ ಮುಗಿಸಿ ಆತ ಅದನ್ನು ಕಸದ ರಾಶಿಯಲ್ಲಿ ಬಿಸುಟಿದ್ದ .ಕಸದ ರಾಶಿಯಿಂದ ಹೆಕ್ಕಿ ತಂದು ನಾನು ಈ ಕಾದಂಬರಿಯನ್ನು ಓದಿದ್ದೆ.ಕಾದಂಬರಿಯ ಶೀರ್ಷಿಕೆ , ಕಾದಂಬರಿಯ ಲೇಖಕರ ಬಗ್ಗೆ ನನಗೆ ಏನೇನೂ  ನೆನಪಿಲ್ಲ .ಆ ಕಾದಂಬರಿಯ ಕಥಾವಸ್ತು ತನ್ನದೆನ್ನುವ ಎಲ್ಲವನ್ನೂ ತ್ಯಜಿಸಿ , ತೋರಿದ ಕಡೆಗೆ ಸಾಗುವ ಮತ್ತು ಈ ಸಾಗುವಿಕೆಯ ನಡುವೆ  ಇರವಿಗಾಗಿ (ಅಂದರೆ ಜೀವ ಉಳಿಸಲಿಕ್ಕಾಗಿ ಅಂತ ಓದಿಕೊಳ್ಳಬಹುದು ) ನಡೆಸುವ  ಹೋರಾಟ  (ಬೇರೆ ಬೇರೆ  'ಪಾತ್ರ' ಅನ್ನಬಹುದೇನೋ? ) ಮಾಡುವ  ಒಬ್ಬನದ್ದು .ಈ ಪಾತ್ರ ನನಗೆ ತುಂಬಾ ದಿನಗಳ ತನಕ ಕಾಡಿತ್ತು. ನಾವೂ ಕೂಡ ಇದೆ ರೀತಿ ನಡೆದುಕೊಂಡರೆ ಆ ಅನುಭವ ಹೇಗಿರಬಹುದು ಅನ್ನುವುದನ್ನು ಈ ಪುಸ್ತಕ ಓದಿದ ಮತ್ತೊಬ್ಬ ಗೆಳೆಯನಲ್ಲಿ ನಾನು ಚರ್ಚಿಸುತಿದ್ದೆ .ಇದೊಂದು ಬಿಟ್ಟರೆ ಗಂಭೀರ ಪ್ರಾಕಾರಕ್ಕೆ ಸೇರಿದ ಯಾವ ಪುಸ್ತಕಗಳನ್ನೂ ನಾನು ಓದಲಿಲ್ಲ .

ಮುಂದೆ MBA ಮಾಡಲು ಬೆಂಗಳೂರಿಗೆ ಬಂದೆ .ಇಲ್ಲಿ ಬಂದ ನಂತರ ಊರಿನಲ್ಲಿ  ಅಪರೂಪಕ್ಕೆನ್ನುವಂತೆ ಓದುತಿದ್ದ ' ಓ ಮನಸೇ ' ಮತ್ತು     ' ಹಾಯ್ ಬೆಂಗಳೂರನ್ನು' ಬಿಡದೆ ಓದಲು ಪ್ರಾರಂಭಿಸಿದೆ .ಈ ನಡುವೆ ಅನಂತ ಮೂರ್ತಿ ಮತ್ತು ಬೈರಪ್ಪನವರ ನಡುವೆ 'ಆವರಣ' ಕಾದಂಬರಿಗೆ ಸಂಬಂಧಿಸಿದಂತೆ ವಿವಾದವೊಂದು ನಡೆಯಿತು . ಈ ವಿವಾದದ ಬಗ್ಗೆ ಚರ್ಚಿಸುತ್ತಾ ರವಿ ಬೆಳಗರೆಯವರು 'ಹಾಯ್ 'ನಲ್ಲಿ ಬೈರಪ್ಪನವರ 'ನಿರಾಕರಣ' ಕಾದಂಬರಿಯ ಬಗ್ಗೆ ಬರೆದರು. ಈ ಕಾದಂಬರಿಯ ವಸ್ತು ನನ್ನನ್ನು ತುಂಬಾ ಆಕರ್ಷಿಸಿತು .ನಿರಾಕರಣ ಕಾದಂಬರಿಯನ್ನು   ಓದಿದೆನಾದರೂ ಆ ಓದು  ನನ್ನನ್ನು ಅಷ್ಟಾಗಿ ನಾಟಲಿಲ್ಲ .ತೇಜಸ್ವಿಯವರು ನಮ್ಮನ್ನು ಬಿಟ್ಟು ಹೋದ ಕೆಲ ದಿನದಲ್ಲೇ ಅವರ ಬಗೆಗಿನ ವಿವರ ತುಂಬಿದ , ಅವರದೇ  ಚಿತ್ರವನ್ನು ಮುಖಪುಟವನ್ನಾಗಿಸಿಕೊಂಡು ಬಂದ ' ಮನಸೇ ' ನನ್ನ ಕೈಯಲ್ಲಿತ್ತು .ಆ ಸಂಚಿಕೆಯ ಓದು  ಸಾಹಿತಿಕ ವ್ಯಕ್ತಿಯ  ಕಡೆಗಿನ ನನ್ನ ಒಲವನ್ನು ಹೆಚ್ಚು ಮಾಡಿಸಿತು .ಆವರಣದ ವಿವಾದ ನನಗೆ ಹೊಸ ಹೊಸ ವಿಷಯವನ್ನು , ವಿವಾದಿತ ಲೇಖಕರ ಬೇರೆ ಬೇರೆ ಪುಸ್ತಕಗಳ ಬಗೆಗಿನ ವಿವರವನ್ನು ಒದಗಿಸಿತು. ನನ್ನಂತೆಯೇ ಕಾಲೇಜಿನಲ್ಲಿ ನನ್ನಿಬ್ಬರು ಗೆಳೆಯರು ಇದೇ ವಿಷಯಾಸಕ್ಥಿಯನ್ನು ಹೊಂದಿದ್ದರು .ಅವರ ನಡುವೆ ಚರ್ಚಿಸುವಾಗ ನನಗೆ ಮತ್ತಸ್ಟು ವಿಷಯ , ಮತ್ತಸ್ಟು ಪುಸ್ತಕಗಳ  ಬಗ್ಗೆ ತಿಳಿಯಿತು. ಹೀಗೇ ಸಾಹಿತ್ಯಾಬಿರುಚಿ ಹೊಂದಿದ ಗೆಳೆಯರ ಸಹವಾಸದಿಂದ ನನ್ನ ಸಾಹಿತ್ಯಾಭಿರುಚಿ ಮತ್ತಸ್ಟು ಹೆಚ್ಚುತ್ತಾ ಹೋಯಿತು.

ಓದು ಮುಗಿಸಿ ಕೆಲಸಕ್ಕೆ ಸೇರಬೇಕಾದರೆ ನನಗೆ ೬ ತಿಂಗಳಸ್ಟು ಸಮಯ ಸಿಕ್ಕಿತ್ತು . ಆಗ ನನಗೆ ವರವಾಗಿ ಬಂದದ್ದು ನಮ್ಮೂರಿನ ಸಾರ್ವಜನಿಕ ಗ್ರಂಥಾಲಯ.ಇದುವರೆಗಿನ ಓದು ಎಸ್ಟೋ ಪುಸ್ತಕಗಳ ಹೆಸರನ್ನು ನನ್ನ ಮನಸಲ್ಲಿ ಟೈಪ್ ಮಾಡಿತ್ತು , ಆ ಪಟ್ಟಿಯನ್ನು ನೆನಪಿಸಿ ಗ್ರಂಥಾಲಯ ದಲ್ಲಿ ಹುಡುಕಿ ಒಂದಷ್ಟು ಪುಸ್ತಕಗಳನ್ನು ಓದಿದೆ - ಗ್ರಹಭಂಗ , ಭಾರತೀಪುರ , ಸಂಸ್ಕಾರ ,ಭವ ಹೀಗೆ .ಈ ಹುಡುಕಾಟದ ನಡುವೆ ಮತ್ತೆ ಕೆಲವು ಪುಸ್ತಕಗಳು ನನ್ನ ಮನೆ ಸೇರಿದವು - ಮೂರ್ತಿರಾಯರ 'ದೇವರು' , ಸಂಜೆ ಕಣ್ಣಿನ ಹಿನ್ನೋಟ , ಕೊವೂರ್ ಬರೆದ ವೈಚಾರಿಕತೆಯ  ಪುಸ್ತಕ.ಹೀಗೆ ಯಾವುದೋ ಒಂದು ಪತ್ರಿಕೆ , ಯಾವುದೋ ಒಂದು ಮುನ್ನುಡಿ/ಬೆನ್ನುಡಿ , ಲಿಖಿತ ಭಾಷಣದ ಓದು , ಗೆಳೆಯರೊಂದಿಗಿನ ಚರ್ಚೆ   ನನ್ನನ್ನು ಮತ್ತಸ್ಟು ಓದಿನತ್ತ ಕರೆದು ಕೊಂಡು ಹೋಗಿದೆ . ಓದು ಮುಗಿಸಿ, ಕೆಲಸಕ್ಕೆ ಸೇರುವ ಮೊದಲು  ಗ್ರಂಥಾಲಯದಲ್ಲಿದ್ದಸ್ತು ದಿನ ನನಗನ್ನಿಸಿದ್ದು - ನಾನೆಸ್ಟು ಅಲ್ಪಾಯುಷಿಯೆಂದು.ಈ ಅಭಿಪ್ರಾಯ ಇಂದಿಗೂ ನನ್ನಲ್ಲಿ ಇದೆ. ಆದರೆ ನಾನು ಮತ್ತಸ್ಟು ಅಲ್ಪಾಯುಷಿ ಆಗುತಿದ್ದೇನೆ ಮತ್ತು ಗ್ರಂಥಾಲಯ  ನನ್ನ ನಿರಾಶೆಯನ್ನ ಮತ್ತಸ್ಟು ಹೆಚ್ಚಿಸುತ್ತಿದೆ. 

ಈ ರವಿವಾರ ವಿಜಯ ಕರ್ನಾಟಕದ ಸಾಪ್ತಾಹಿಕ ಪುರವಣಿಯಲ್ಲಿ 'ಜೋಗಿ' ಯವರು ಬರೆದ 'ಎಲ್ಲಿಂದ ಶುರು , ಯಾವುದು ಕೊನೆ ?' ಓದಿದ ಬಳಿಕ  ನನಗೆ ಮೇಲೆ ಬರೆದ ವಿಷಯವನ್ನು ಹಂಚಬೇಕೆನ್ನಿಸಿತು.  

2 ಕಾಮೆಂಟ್‌ಗಳು:

KP ಹೇಳಿದರು...

u hv made a good come back....good

nenapina sanchy inda ಹೇಳಿದರು...

ತುಂಬ ಆಪ್ತವಾಗಿದೆ ಬರಹ!!
books are my only friends. I cannot stay without them.
Happy birthday to your blog.
:-)
malathi S

ನನ್ನ ಬಗ್ಗೆ

ನನ್ನ ಫೋಟೋ
ಹೊಟ್ಟೆ ಮತ್ತು ಬಟ್ಟೆಗಾಗಿ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತಿದ್ದೇನೆ.ಕತೆ,ಕವಿತೆ,ಕಾದಂಬರಿಗಳೆಂದರೆ ನನ್ನ ಪ್ರೇಯಸಿಯರಿದ್ದಂತೆ.ಹಳೆ ಹಾಡುಗಳ ಹುಚ್ಚ (ಹಾಗಂತ ಹೊಸ ಹಾಡುಗಳ ಬಗ್ಗೆ ಕಂಪ್ಲೇಂಟ್ ಇಲ್ಲ).ಬೇಸರದ ಹಾಡುಗಳೆಂದರೆ ಮತ್ತೂ ಇಷ್ಟ .

ನನ್ನ ಬ್ಲಾಗ್ ಪಟ್ಟಿ